ಜೀ ಕನ್ನಡ ವಾಹಿನಿಯ ಜನಪ್ರಿಯ ಗಾಯನ ಸ್ಪರ್ಧೆ “ಸಾರೆಗಮಪ 2026″ರಲ್ಲಿ ತಮ್ಮ ಅನನ್ಯ ಒಪೆರಾ ಗಾಯನ ಶೈಲಿಯಿಂದ ಕರ್ನಾಟಕ ಹಾಗೂ ಪ್ರಪಂಚದಾದ್ಯಂತ ಪ್ರೇಕ್ಷಕರ ಮನಗೆದ್ದಿರುವ ಪುಟ್ಟ ಪ್ರತಿಭೆ ಅನುಷ್ಕಾ ಕಾಗಿನೆರೆ ಅವರು ಜುಲೈ 4ರಂದು ತಮ್ಮ 12ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ
ಮಲೆನಾಡು ಪ್ರಾಂತ್ಯದ ಸಕಲೇಶಪುರ ತಾಲ್ಲೂಕಿನ ಕಾಗಿನೆರೆ ಮೂಲದ ಅನುಷ್ಕಾ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕರ್ನಾಟಕದಾದ್ಯಂತ ನಡೆದ ಆಡಿಷನ್ಗಳಲ್ಲಿ ಭಾಗವಹಿಸಿ ಆಯ್ಕೆಯಾದ 19 ಸ್ಪರ್ಧಿಗಳ ಪೈಕಿ ಅತ್ಯಂತ ಕಿರಿಯ ಸ್ಪರ್ಧಿ ಹಾಗೂ ಹಳೇ ಮೈಸೂರು ಭಾಗದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಎಂಬ ಹೆಗ್ಗಳಿಕೆ ಅನುಷ್ಕಾ ಅವರದ್ದಾಗಿದೆ.
ಕಳೆದ ಸುಮಾರು 2.5 ತಿಂಗಳುಗಳಿಂದ ಸ್ಪರ್ಧೆಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅನುಷ್ಕಾ, ಈವರೆಗೆ 5 ಗೋಲ್ಡನ್ ಬಜರ್ಗಳನ್ನು ಗಳಿಸಿದ್ದು, ತಮ್ಮ ವಿಶಿಷ್ಟ ಒಪೆರಾ ಗಾಯನ ಶೈಲಿಯಿಂದ ಅಲ್ಪಾವಧಿಯಲ್ಲೇ ಮನೆಮಾತಾಗಿದ್ದಾರೆ.
ಅನುಷ್ಕಾ, ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಹಾಗೂ ಮೂರು ವಾಣಿಜ್ಯ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿರುವ ಆದರ್ಶ್ ಗುಂಡೂರಾಜ್ ಮತ್ತು ಡಾ. ದೀಪಾಶ್ರೀ ದಂಪತಿಗಳ ಪುತ್ರಿಯಾಗಿದ್ದಾರೆ.

ಅನುಷ್ಕಾ ಅವರ ಪ್ರತಿಭೆಯನ್ನು ಗುರುತಿಸಿರುವ ಖ್ಯಾತ ಸಂಗೀತ ನಿರ್ದೇಶಕ ಶ್ರೀ ಅರ್ಜುನ್ ಜನ್ಯ ಅವರು, ಒಂದು ಸ್ಟಾರ್ ಚಿತ್ರದ ಹಾಡಿನಲ್ಲಿ ಒಪೆರಾ ಗಾಯನಕ್ಕಾಗಿ ಅವಕಾಶ ನೀಡಿದ್ದಾರೆ. ಆ ಹಾಡಿನ ಗಾಯನ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ಪುಟ್ಟ ವಯಸ್ಸಿನಲ್ಲೇ ರಾಜ್ಯದ ಗಮನ ಸೆಳೆದಿರುವ ಅನುಷ್ಕಾಗೆ ಇದು ಮರೆಯಲಾಗದ ಹುಟ್ಟುಹಬ್ಬ. ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಶುಭ ಹಾರೈಕೆಗಳು ಎಲ್ಲೆಡೆಯಿಂದ ವ್ಯಕ್ತವಾಗುತ್ತಿವೆ.
