ಟ್ರೇಲರ್ ನಲ್ಲೇ ಮೋಡಿ ಮಾಡಿದ ‘ಟೆರರ್’ ಏಪ್ರಿಲ್ 10ರಂದು ತೆರೆಗೆ

ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರ ಸಮ್ಮುಖದಲ್ಲಿ ಟ್ರೇಲರ್ ಅನಾವರಣ .ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ಅವರ ನಿರ್ಮಾಣದ, ರಂಜನ್ ಶಿವರಾಮ್ ಗೌಡ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ “ಟೆರರ್” ಚಿತ್ರ ಆರಂಭದಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು, ಹಿರಿಯ ಕಲಾವಿದರಾದ ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಸುಂದರರಾಜ್, ಪ್ರಮೀಳಾ ಜೋಷಾಯ್, ಡಿಂಗ್ರಿ ನಾಗರಾಜ್, ಲಹರಿ ವೇಲು ಹಾಗೂ ಬ್ರಹ್ಮಾಂಡ ಗುರೂಜಿ “ಟೆರರ್” ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ ಚಿತ್ರ ಆರಂಭವಾದ ದಿನದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಾಯಕ ಆದಿತ್ಯ, ಚಿತ್ರ ಉತ್ತಮವಾಗಿ ಮೂಡಿಬರಲು ಇಡೀ ಚಿತ್ರತಂಡ ಕಾರಣ. ವಿಶೇಷವಾಗಿ ಇಂತಹ ಸಂದರ್ಭದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರಿಗೆ ವಿಶೇಷ ಧನ್ಯವಾದ. ಇನ್ನೂ ನಿರ್ದೇಶಕ ರಂಜನ್ ಅವರು ಮೊದಲ ನಿರ್ದೇಶನದಲ್ಲೇ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಹಾಗೂ ಶ್ರೀನಗರ ಕಿಟ್ಟಿ 21 ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸಿದ್ದೇವೆ. ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ ಹೀಗೆ ಅನೇಕ ಹಿರಿಯ‌ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಹಾಗೂ ಡಾ||ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ನಮ್ಮ ಚಿತ್ರ ಇದೇ ಏಪ್ರಿಲ್ 10 ರಂದು ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಿರ್ದೇಶಕರು ಬಂದು ಕಥೆ ಹೇಳಿದಾಗ ನಿರ್ಮಾಪಕರು ಯಾರು ಎಂದು ಕೇಳಿದೆ‌. ಸಿಲ್ಕ್ ಮಂಜು ಅವರು ಅಂತ ಹೇಳಿದರು. ನಾನು ಕಥೆ ಹೇಳಬೇಡಿ. ಮಂಜು ಅವರು ನನ್ನ ಸಾಕಷ್ಟು ವರ್ಷಗಳ ಸ್ನೇಹಿತರು. ಅವರಿಗಾಗಿ ಈ ಸಿನಿಮಾ ಮಾಡುತ್ತೇನೆ ಅಂದೆ. ಇನ್ನೂ ಗೆಳೆಯ ಆದಿತ್ಯ ಅವರ ಜೊತೆಗೆ ಆದಿ ಚಿತ್ರದಲ್ಲಿ ನಟಿಸಿದ್ದೆ. ಬಹಳ ವರ್ಷಗಳ ನಂತರ ಈಗ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ನಟ ಶ್ರೀನಗರ ಕಿಟ್ಟಿ ಹೇಳಿದರು.

ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಅಮೇರಿಕಾದಲ್ಲಿರುವ ನನ್ನ ಸ್ನೇಹಿತ ರವಿ ಅವರು ಸಹ ನನ್ನ ಜೊತೆ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಚಿತ್ರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ದಯವಿಟ್ಟು ನಮ್ಮ ಚಿತ್ರವನ್ನು ಎಲ್ಲರೂ ನೋಡಿ . ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸಿಲ್ಕ್ ಮಂಜು.

ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ಆಗಮಿಸಿದ ಅತಿಥಿಗಳಿಗೆ ನಿರ್ದೇಶಕ ರಂಜನ್ ಶಿವರಾಮ್ ಗೌಡ ಧನ್ಯವಾದ ಹೇಳಿದರು.

ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್, ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಕಲಾವಿದರಾದ ಸಿಹಿಕಹಿ ಚಂದ್ರು, ಕೀರ್ತಿ ರಾಜ್, ಕರಿ ಸುಬ್ಬು, ಮುಂಬೈ ನಟಿ ಶಿವಾಂಗಿ, ನಾಗೇಂದ್ರ ಅರಸ್ ಮುಂತಾದವರು “ಟೆರರ್” ಚಿತ್ರದ ಕುರಿತು ಮಾತನಾಡಿದರು. ರವಿಚೇತನ್, ಕೋಟೆ ಪ್ರಭಾಕರ್, ರವಿ ಭಟ್, ಅಶ್ವಿನ್ ಹಾಸನ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಹಾಗೂ ಛಾಯಾಗ್ರಾಹಕ ನವೀನ್ ಅಕ್ಷಿ, ಸಂಕಲನಕಾರ ಶ್ರೀಕಾಂತ್ ಮುಂತಾದ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments